ನಮ್ಮ
ಹಳೆಯ ವೈರಿಯೊಡನೆ ಸ್ನೇಹದ ಮಾತುಕತೆಗೆ ಕುಳಿತುಕೊಳ್ಳುವ ಸಂಧರ್ಭ ಬಂದರೆ ಕೂಡಲೇ ಅಧೀರರಾಗುತ್ತೇವೆ.
ಅದನ್ನು ಸಾಧ್ಯವಾದಷ್ಟು ತಪ್ಪಿಸುವುದಕ್ಕೆ ಪ್ರಯತ್ನಿಸುತ್ತೇವೆ; ಅದು ಅನಿವಾರ್ಯವಾದರೆ ಮೈಯೆಲ್ಲ ಕಣ್ಣಾಗಿ
ಎಲ್ಲ ರೀತಿಯ ರಕ್ಷಣಾ ತಂತ್ರದೊಂದಿಗೆ, ಯಾವ ಕ್ಷಣದಲ್ಲೂ ಬಂದೊದಗುವ ತುರ್ತಿಗೆ ಸಿದ್ಧರಾಗಿ ಕೂರುತ್ತೇವೆ.
ನಮ್ಮ ಎಲ್ಲ ಇಂದ್ರಿಯಗಳು ಬಂದೊದಗಬಹುದಾದ ಅಪಾಯದ ಸುಳಿವಿನ ನಿರೀಕ್ಷೆಯಲ್ಲೇ ಉಳಿಯುತ್ತವೆ. ಇಂಥ ಆತಂಕ
ಭರಿತ ಸ್ಥಿತಿಯಲ್ಲಿ ಮಾತಿನ ನಡುವಿನ ಸ್ನೇಹದ ಮಾತುಗಳು ಕೇಳದೆ ಹೋಗುತ್ತವೆ. ಒಳ್ಳೆಯ ಮಾತುಗಳೆಲ್ಲ
ಪಿತೂರಿಯಂತೆ ಭಾಸವಾಗುತ್ತವೆ. ಅಪನಂಬಿಕೆಯ ಈ ಹೊಸಿಲಲ್ಲಿ
ಯಾವ ಮಾತುಕತೆಗಳು ಕುದುರಲಾರವು.
ಮೊನ್ನೆ,
2014 ರ ಸೆಪ್ಟೆಂಬರ್ 15 ರಂದು ನಲ್ಲಿ ಚೀನಾ ದೇಶದ ಅಧ್ಯಕ್ಷರು
ಭಾರತಕ್ಕೆ ಭೇಟಿಯಿತ್ತ ಸಮಯದಲ್ಲಿ ಇಂಥದ್ದೇ ಆತಂಕ ಭರಿತ ಕ್ಷಣಗಳಿದ್ದವು. ಆರಂಭವಾದ ದ್ವಿಪಕ್ಷೀಯ ಮಾತುಕತೆಯ
ನಡುವಲ್ಲಿ ಚೀನಾದ ಸೇನೆಯು ಲಡಾಕ್ನ ಸೀಮೆಯೊಳಗೆ ಕಾಣಿಸಿಕೊಂಡಿದ್ದು ಎರಡೂ ದೇಶದ ಮುಖ್ಯಸ್ಥರಿಗೆ ಇರುಸು ಮುರುಸಾಯಿತು.
ತಕ್ಷಣ ಇದನ್ನು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದ
ವಿಷಯವನ್ನಾಗಿ ಗ್ರಹಿಸಲಾಯ್ತು. ನಮ್ಮ ಪ್ರಧಾನ ಮಂತ್ರಿಗಳು
ತಾವೇ ಮುಂದಾಗಿ, ಇಂತಹ ಸಣ್ಣ ಸಣ್ಣ ಘಟನೆಗಳು ಬಹು ದೊಡ್ಡ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ; ಹಲ್ಲೊಂದರ
ನೋವು ಇಡೀ ಶರೀರವನ್ನೇ ನಿಶ್ಕ್ರಿಯಗೊಳಿಸುತ್ತದೆ ಎಂದು ಖಡಕ್ಕಾಗಿ ಚೀನಾದ ಅಧ್ಯಕ್ಷರಿಗೆ ತಿಳಿಸಲೇಬೇಕಾಯ್ತು.
ಇದಕ್ಕೆ ಪ್ರತಿಯಾಗಿ ಚೀನಾದ ಅಧ್ಯಕ್ಷರು ಲಡಾಕ್ ನಿಂದ ಹಿಂದೆಗೆಯಲು ತಮ್ಮ ಸೇನೆಗೆ ನಿರ್ದೇಶನ ನೀಡಲಾಗಿದೆ
ಎಂದು ಹೇಳಿದ 24 ಗಂಟೆಗಳ ತರುವಾಯವೂ ಅವರ ಸೇನೆಯು ಹಿಂದಿರುಗದಿದ್ದುದು ನಿಜಕ್ಕೂ ಆತಂಕಕಾರಿಯಾಗಿತ್ತು. ಇದನ್ನು ಎರಡೂ ದೇಶಗಳು ಸಾಧಿಸಬಹುದಾಗಿದ್ದ ಉತ್ತಮ ರಾಜತಾಂತ್ರಿಕ
ಸಂಬಂಧಗಳು ತನ್ಮೂಲಕ ಆಗಬಹುದಿದ್ದ ಆರ್ಥಿಕ ಒಪ್ಪಂದಗಳು, ಪರಸ್ಪರ ಅಭಿವೃದ್ಧಿಕಾರ್ಯಗಳು ಮೂಲೆಗೆ ಬಿದ್ದು
ಎರಡೂ ದೇಶಗಳು ಸರ್ವತೋಮುಖ ಅಭಿವೃದ್ಧಿಯನ್ನು ಕಾಣಬಹುದಾಗಿದ್ದ ಈ ಹೊತ್ತಿನ, ಅಷ್ಟೇ ಏಕೆ, ಈ ಶತಮಾನದ,
ಕಳೆದುಕೊಂಡ ಒಂದು ಅಭೂತಪೂರ್ವ ಅವಕಾಶವೆಂಬುದಾಗಿ ವಿಷ್ಲೇಶಿಸಲಾಯ್ತು. ಎರಡೂ ದೇಶಗಳೂ ಒಂದೊಂದು ರೀತಿಯಲ್ಲಿ ಶಕ್ತಿಯುತವಾಗಿವೆ. ಚೀನಾ
ದೇಶವು ಇಂದು ಮೂಲಭೂತ ಸೌಕರ್ಯನಿರ್ಮಾಣದ, ಉತ್ಪಾದನೆಯ ದೈತ್ಯ ಶಕ್ತಿಯಾಗಿ ನಿಂತಿದೆ; ಸಮರ್ಥವಾಗಿ ಸೂಪರ್
ಹೈವೆಗಳನ್ನು, ಸೂಪರ್ ಫಾಸ್ಟ್ ರೈಲು ದಾರಿಗಳನ್ನು, ಟ್ರೈನುಗಳನ್ನು, ಕನಿಷ್ಠ ವೆಚ್ಚದ ಪವರ್ ಸ್ಟೇಷನ್
ಗಳನ್ನು ನಿರ್ಮಾಣ ಮಾಡುವ ಸಾಮರ್ಥ್ಯ ಹೊಂದಿದೆ. ಅಷ್ಟೇ
ಅಲ್ಲ ಇವುಗಳ ನಿರ್ಮಾಣಕ್ಕೆ ಬೇಕಾಗುವ ಆರ್ಥಿಕ ಸಹಕಾರವನ್ನು ನೀಡುವ ಶಕ್ತಿಯನ್ನೂ ಹೊಂದಿದೆ. ಭಾರತಕ್ಕೆ ತುರ್ತಾಗಿ ಈಗ ಇಂಥಹ ಸೂಪರ್ ಹೈವೆಗಳು, ಸೂಪರ್
ಫಾಸ್ಟ್ ಟ್ರೈನುಗಳು, ಪವರ್ ಸ್ಟೇಷನ್ ಗಳ, ಅವುಗಳ ನಿರ್ಮಾಣಕ್ಕೆ ತಗಲುವ ಆರ್ಥಿಕ ಸಂಪನ್ಮೂಲಗಳ ಅಗತ್ಯವಿದೆ.
ಹಾಗೆಯೇ ಭಾರತದಲ್ಲಿ ಚೀನಾಕ್ಕೆ ಈ ಹೊತ್ತಿಗೆ ಅಗತ್ಯವಿರುವ
ಕೌಶಲ್ಯಪೂರ್ಣ ಮಾನವ ಸಂಪನ್ಮೂಲ, ಶೈಕ್ಷಣಿಕ ಸಂಪತ್ತು, ತಂತ್ರಾಂಶ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ,
ಮುಖ್ಯವಾಗಿ ಚೀನಾದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಇಂಗ್ಲಿಷ್ ಶಿಕ್ಷಕರ ಅಗತ್ಯವಿದೆ. ಚೀನಾದೇಶವು ಭೌಗೋಳೀಕರಣದ
ಈ ಹೊತ್ತಿನಲ್ಲಿ ಇಂಗ್ಲೀಷ್ ಶಿಕ್ಷಣದ ಅಗತ್ಯವನ್ನು
ಚೆನ್ನಾಗಿ ಮನಗಂಡಿದೆ. ಹೀಗೆ ಎರಡೂ ದೇಶಗಳು
ತಮ್ಮ ತಮ್ಮ ಸಾಮರ್ಥ್ಯಗಳ ಸಂಕ್ರಮಣದಲ್ಲಿ ಜೊತೆಗೂಡಿ ಹಿಂದೆಂದೂ ಕಾಣದ ಅಭೂತಪೂರ್ವ ಅಭಿವೃದ್ಧಿಯನ್ನು
ಕಾಣುವ, ತನ್ಮೂಲಕ ಜಾಗತಿಕ ದೈತ್ಯ ಶಕ್ತಿಯಾಗಿ ಹೊರ ಹೊಮ್ಮುವ ಕಾಲಘಟ್ಟದಲ್ಲಿ ಬಂದು ನಿಂತಿವೆ. ಸಂಕ್ರಮಣದ
ಈ ಹೊತ್ತಿನ, ಈ ಶತಮಾನದ ಅವಕಾಶವು ಉಭಯ ದೇಶಗಳ ಆ ‘ವೆಸ್ಟ್ ಫಾಲಿನ್ ಸಾರ್ವಭೌಮತ್ವದ’ ಪ್ರತಿಷ್ಠೆಯ
ಗುಂಗಿನಲ್ಲಿ ಕಳೆದು ಹೋಯಿತೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.
ಅಷ್ಟಕ್ಕೂ
ಈ ಸಾರ್ವಭೌಮತ್ವದ ಹಿಡಿಕೆಗೆ, ಅದು ಒಡ್ಡುವ ಸಂದಿಗ್ಧಕ್ಕೆ ದೇಶಗಳು ಸಿಲುಕಿ ಹೀಗೆ ನಲುಗುವುದೇಕೆ?
ಅಭಿವೃದ್ಧಿಗೆ ಹಿನ್ನಡೆಯಾದರೂ ಸರಿ, ನಮ್ಮ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಕೂಡದು ಎಂದು ಚಡಪಡಿಸುತ್ತೇವೆ. ಏನಿದು ಸಾರ್ವಭೌಮತ್ವ? ಇದರ ಮೂಲವೇನು? ಮೌಲ್ಯವೇನು ಎಂದು
ಕೆದಕಿದರೆ ಇತಿಹಾಸವು ನಮ್ಮನ್ನು ಯುರೋಪಿನ ಹದಿನೇಳನೇ ಶತಮಾನದ ಪೂರ್ವಾರ್ಧಕ್ಕೆ ತಂದು ನಿಲ್ಲಿಸುತ್ತದೆ.
ತಮ್ಮ ದೇಶಗಳ, ಗಡಿಗಳ ಸ್ವಾಮ್ಯದ ಕಲಹದಲ್ಲಿ ಸಿಲುಕಿ
ಸತತ ಮುವ್ವತ್ತು ವರ್ಷಗಳ ಯುದ್ಧದಲ್ಲಿ ಕಂಗೆಟ್ಟು ಹೋಗಿದ್ದ ಅಂದಿನ ರೋಮ್, ಸ್ಪೇನ್, ಫ್ರಾನ್ಸ್, ಸ್ವೀಡನ್ ಮತ್ತು ಡಚ್
ದೇಶಗಳು ಕೊನೆಗೆ ಒಂದು ಒಮ್ಮತಕ್ಕೆ ಬರುತ್ತವೆ. ಅದನ್ನು 1648 ರ ವೆಸ್ಟ್ ಫಾಲಿಯನ್ ಶಾಂತಿ ಒಪ್ಪಂದವೆಂದು
ಕರೆಯಲಾಗುತ್ತದೆ. ಅದರಂತೆ. ಈ ದೇಶಗಳು ಆಯಾ ದೇಶಗಳ ರಾಜ್ಯ, ಗಡಿ, ಆಂತರಿಕ ರಾಜಕೀಯ, ಧಾರ್ಮಿಕ, ಆರ್ಥಿಕ
ವಿಚಾರಗಳಲ್ಲಿ ಬೇರೆಯವರು ಹಸ್ತಕ್ಷೇಪ ಮಾಡದಂತೆ ತಾವೇ ತಮ್ಮ ಇಚ್ಛೆಯಂತೆ ನಡೆದುಕೊಳ್ಳುವುದು ಮತ್ತು
ಉಳಿದ ದೇಶಗಳನ್ನು ಅದರಂತೆಯೇ ಗೌರವಿಸುವುದು. ಈ ಒಡಂಬಡಿಕೆಯ
ನಂತರ ಬಹುತೇಕ ಯುರೋಪಿನಲ್ಲಿ ಇಂತಹ ಕಲಹಗಳು ನಿಂತು ದೇಶಗಳು ಅಭಿವೃದ್ಧಿಯತ್ತ ಗಮನ ಹರಿಸತೊಡಗುತ್ತವೆ.
ಹೀಗೆ ಅಂದು ಯುರೋಪಿನ ದೇಶಗಳು ಪಡೆದ ಸಾರ್ವಭೌಮತ್ವವನ್ನು
ವೆಸ್ಟ್ ಫಾಲಿಯನ್ ಸಾರ್ವಭೌಮತ್ವವೆಂದು ಕರೆಯಲಾಗುತ್ತದೆ. ಈ ಒಡಂಬಡಿಕೆಯಿಂದಲೇ ಮುಂದೆ ಡಚ್ಚರು, ಫ್ರೆಂಚರು,
ಪೋರ್ಚುಗೀಸರು ಮತ್ತು ಇಂಗ್ಲೀಷರು ತಮ್ಮ ವಸಾಹತುಗಳನ್ನು
ಯುರೋಪಿನಾಚೆ ಸ್ಥಾಪಿಸಿದ್ದು. ಹೀಗೆ ಇವರೆಲ್ಲ ಒಬ್ಬೊಬ್ಬರಾಗಿ ಭಾರತಕ್ಕೂ ಬಂದು ಅಂತಿಮವಾಗಿ ಇಂಗ್ಲೀಷರು
ಇಲ್ಲಿ ನೆಲೆ ನಿಂತರು. ಹೀಗೆ ಯುರೋಪಿನಲ್ಲಿ ಭೌಗೋಳಿಕವಾಗಿ ಚಿಕ್ಕದಾಗಿದ್ದ ದೇಶಗಳು ತಮ್ಮ ನಾಡಿನ ಶಾಂತಿಗೆ,
ಅಭಿವೃದ್ಧಿಗೆ ನೆರೆರಾಷ್ಟ್ರಗಳೊಂದಿಗೆ ಸಹಬಾಳ್ವೆಯ ಒಂಡಂಬಡಿಕೆಯೊಂದಿಗೆ ತಮ್ಮ ಸಾರ್ವಭೌಮತ್ವವನ್ನು
ಒಂದು ಪ್ರತಿಷ್ಠೆಯ ವಿಷಯವನ್ನಾಗಿಸದೆ, ಅದನ್ನು ಮುಂದೆ ಆರ್ಥಿಕ ಭೌಗೋಳೀಕರಣದ ಹೊತ್ತಿಗೆ ಇನ್ನಷ್ಟು
ವಿಕಾಸ ಹೊಂದುವಂತೆ ಮಾಡಿ ಇಂದು ಆ ದೇಶಗಳು ಸಮಗ್ರ ಯುರೋಪಿನ ಆರ್ಥಿಕ ಅಭಿವೃದ್ಧಿಗೆ ಯುರೋಪಿನಾದ್ಯಂತ
ಒಂದೇ ಕರೆನ್ಸಿಯನ್ನು ಬಳಸುವತ್ತ ಸಾಗಿವೆ. ಇಂದು ಯುರೋಪಿನ ದೇಶಗಳಲ್ಲಿ ನಮ್ಮ ನೆರೆಹೊರೆಯ ದೇಶಗಳಲ್ಲಿರುವಂತೆ ಆತಂಕದ ಪರಿಸ್ಥಿತಿಯಿಲ್ಲ.
ಏಷ್ಯಾದ ದೇಶಗಳು ಇನ್ನೂ 17 ನೇ ಶತಮಾನದ ವೆಸ್ಟ್ ಫಾಲಿಯನ್ ಸಾರ್ವಭೌಮತ್ವದ ಹಿಡಿಕೆಯಲ್ಲಿ ಸಿಕ್ಕಿಕೊಂಡು
ನಲುಗುತ್ತಿವೆ. ಪರಸ್ಪರ ಅಭಿವೃದ್ಧಿಯ ಅವಕಾಶಗಳನ್ನೂ ತಮ್ಮ ಪ್ರತಿಷ್ಠೆಯಲ್ಲಿ ಹೂತು ಹಾಕುವಂಥ ಮನಸ್ಥಿತಿಯಲ್ಲಿವೆ.
ಇದರ ಸಿಲುಕಿನಲ್ಲಿ ಸಿಕ್ಕಿ ಇಡೀ ಏಷ್ಯಾದಲ್ಲಿ ವೆಚ್ಚವಾಗುವ
ರಕ್ಷಣಾ ಬಜೆಟ್ ಸಹ ಏರುತ್ತಿದೆ; ಇಷ್ಟೂ ಹಣವು ಅಭಿವೃದ್ಧಿಗೆ
ದೊರೆತರೆ ಹೇಗೆ ಎಂಬ ಆಲೋಚನೆ ಮೂಡದಷ್ಟು ಗಾಢವಾಗಿ ಕಳೆದುಹೋಗಿವೆ.
ವಸುದೈವಕುಟುಂಬಕಂ
ಎಂದರೆ ಇದೇ ಅಲ್ಲವೆ?
ಹಾಗೆಂದು
ಇದು ಒಂದು ದೇಶದ ಕೈಯಲ್ಲಿ ಇರುವ ಆಯ್ಕೆಯಲ್ಲ; ನೆರೆಯ ಎಲ್ಲ ದೇಶಗಳೂ ಸಹಕರಿಸಬೇಕು.
ಬೆಕ್ಕಿಗೆ
ಗಂಟೆ ಕಟ್ಟುವವರು ಯಾರು?

No comments:
Post a Comment