Wednesday, December 10, 2014

ಮೌಢ್ಯವೇ ಧರ್ಮವಾದಾಗ


ನೇಪಾಳದ ಕಠ್ಮಂಡುವಿನಿಂದ ನೂರು ಮೈಲಿ ದಕ್ಷಿಣಕ್ಕಿರುವ ಬಾರಾ ಜಿಲ್ಲೆಯ ಬರಿಯಾರಪುರದ ಗಧಿಮಾಯಿ ದೇವಳದಲ್ಲಿ  ಐದು ವರ್ಷಗಳಿಗೊಮ್ಮೆ ನಡೆಯುವ ಗಧಿಮಾಯಿ ಪರ್ಬ(ಹಬ್ಬ)ದಲ್ಲಿ ಸುಮಾರು ಐದು ಲಕ್ಷ ಪ್ರಾಣಿಗಳನ್ನು ಬಲಿಕೊಡಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಎಮ್ಮೆ, ಹಂದಿ, ಮೇಕೆ, ಕುರಿ ಕೋಳಿ ಮತ್ತು ಬಿಳಿ ಇಲಿಗಳನ್ನು ಬರ್ಬರವಾಗಿ ವಧಿಸಲಾಗುತ್ತದೆ. ಭಯಾನಕ ವಧೆಯ ದೃಷ್ಯಗಳು ನೋಡುವವರ ಎದೆಯನ್ನು ಒಮ್ಮೆ ಝಲ್ಲೆಂದು ನಡುಗಿಸುತ್ತವೆ. ಪ್ರಮಾಣದ, ಇಷ್ಟು ಘೋರವಾದ ಪ್ರಾಣಿಗಳ ಮಾರಣಹೋಮ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲವೆಂದೇ ಹೇಳಬೇಕು.
ದೇವರ ಕೃಪೆಗಾಗಿ ನಡೆಯುವ ಬಲಿಯ ಆಚರಣೆ ವೇದಗಳ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಲಾಗುತ್ತದೆ. ವೇದಗಳ ಕಾಲದಲ್ಲಿ ಚಾಲ್ತಿಯಲ್ಲಿತ್ತು ಎಂದು ಹೇಳಲಾಗುವ ಪುರುಷಮೇಧ, ಅಶ್ವಮೇಧ ಇವುಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಒಂದೆಡೆ ಅವು ಸಾಂಕೇತಿಕವಾಗಿದ್ದವು ಎಂದು ಹೇಳಲಾಗುತ್ತದೆ; ಮತ್ತೊಂದೆಡೆ ಅವುಗಳು ಸಾಂಕೇತಿಕವಾಗುವ ಮೊದಲು ಆಚರಣೆಯಲ್ಲಿದ್ದವು; ಕ್ರಮೇಣ ಅವು ವಿಚಾರ ಮಂಥನಕ್ಕೆ ಸಿಕ್ಕು ಕಾಲಾನಂತರದಲ್ಲಿ ಸಾಂಕೇತಿಕವಾಗಿ ಬದಲಾವಣೆ ಹೊಂದಿದವು ಎಂದು ಹೇಳಲಾಗುತ್ತದೆ. ಇಷ್ಟು ವಿವರಗಳನ್ನು ಇಂದು ನಾವು ಮಂಥನಕ್ಕೆ ಒಡ್ಡಿದರೆ  ವೈಚಾರಿಕ ಪ್ರಜ್ಞೆ, ಅದು ಪುರೋಹಿತ ವರ್ಗದಲ್ಲಿ ತಂದ ಬದಲಾವಣೆಯು ಸಮಾಜದ ಕೆಳ ಸ್ತರಗಳಿಗೆ ಏಕೆ ಇಳಿಯಲಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಬಹುಶಃ ಅಂದು ಅದು ಕೆಳಗಿನ ಸ್ತರಗಳಿಗೆ ಇಳಿದಿದ್ದರೆ ಇಂದು ಶೂದ್ರರು ಮಾರಮ್ಮನಿಗೆ ಕುರಿ, ಕೋಳಿ, ಕೋಣಗಳ ಬಲಿಯನ್ನು ಕೊಡುತ್ತಿರಲಿಲ್ಲವೇನೋ.. ತಮ್ಮನ್ನು ಬದಲಾವಣೆಗೆ ಒಡ್ಡಿಕೊಂಡ ಪುರೋಹಿತ ವರ್ಗವು ತಮ್ಮ   ಸೇವೆಯಲ್ಲಿದ್ದ ಶೂದ್ರರಲ್ಲಿ ಅರಿವನ್ನು ಮೂಡಿಸದಿರುವ ಅನಿವಾರ್ಯತೆಯನ್ನು ಕಾರ್ಲ್ ಮಾರ್ಕ್ಸ್ ಬಂಡವಾಳ ಮತ್ತು ಶ್ರಮದ ಹಾಗೂ ಶೋಷಕರು ಮತ್ತು  ಶೋಷಿತರ ನಡುವಿನ ಸಂಬಂಧದ ಪರಿಭಾಷೆಯಲ್ಲಿ ಅರಿಯಬಹುದು. ಶೋಷಕರ ಸೇವೆಯೇ ತಮ್ಮ ಜೀವನ ಕ್ರಮ, ತಾವು ಅನುಭವಿಸುವ ತಾರತಮ್ಯವೇ ತಮ್ಮ ಪ್ರಾರಬ್ಧ ಎಂಬ ಮನಸ್ಥಿತಿಗೆ ತಳ್ಳಲ್ಪಟ್ಟ ಶೂದ್ರರು ಯಾವುದೆ ಮೇಲರಿಮೆ ಅಥವ ಕೀಳರಿಮೆಯಲ್ಲಿ ಸಿಲುಕದೆ, ಹುಲಿಯ ಆಕ್ರಮಣಕ್ಕೆ ಒಳಗಾಗುವುದೇ ತನ್ನ ಧರ್ಮವೆಂದು ಅರಿತ ಪುಣ್ಯಕೋಟಿ ಗೋವಿನಂತಿದ್ದರು.   ಇಂಥಹ ಮನಸ್ಥಿತಿಯಲ್ಲಿ ತಮ್ಮ ಸೇವೆಯಲ್ಲಿ ತೊಡಗಿರುವ ಶೂದ್ರರಿಗೆ ವಿವೇಕವನ್ನು ತುಂಬುವುದು, ಅವರ ಆಚರಣೆಗಳನ್ನು ಸುಧಾರಿಸುವುದು, ತನ್ಮೂಲಕ ಬದಲಾವಣೆಯ ಬೀಜವನ್ನು ಬಿತ್ತುವುದು ಪುರೋಹಿತ ವರ್ಗಕ್ಕೆ ತಾವು ನಿಂತ ನೆಲವನ್ನೇ ಅಗೆಯುವಂಥ ಸ್ಥಿತಿಯಾಗಿತ್ತುಅರಿವಿನ ಸೆಲೆಗೆ ಸಿಕ್ಕ ಶೂದ್ರರು ಜ್ಞಾನೋದಯದಿಂದ ತಮ್ಮ ಸೇವೆಯನ್ನು ತ್ಯಜಿಸಿಯಾರೆಂಬ ಆತಂಕದ ಭೀತಿಗೆ ಸಿಕ್ಕ ಪುರೋಹಿತ ವರ್ಗ ಅವರನ್ನು ಇರುವಂತೆಯೇ ಬಿಟ್ಟು ಸ್ವಹಿತಕ್ಕಾಗಿ ತನ್ನಷ್ಟಕ್ಕೆ ತಾನು ಮುನ್ನಡೆಯಿತು. ಇಂದು ಬಹುತೇಕ ಶೂದ್ರರೇ ದೇವರನ್ನು ಒಲಿಸಿಕೊಳ್ಳಲು, ದೇವರ ಕೃಪೆಗೆ ಪಾತ್ರರಾಗಲು ಕುರಿ, ಕೋಳಿ, ಕೋಣಗಳನ್ನು ಬಲಿಕೊಡುವ ಆಚರಣೆಯಲ್ಲಿದ್ದಾರೆ. ದೇವರ ಕೃಪೆಯನ್ನು ದಯಪಾಲಿಸುವ ಕಾಯಕವೆಂದು  ಮನಸ್ಸಿನಲ್ಲಿ ಬೇರೂರಿರುವುದರಿಂದ ಶೂದ್ರರೂ ಆಚರಣೆಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ.
ಸ್ವತಂತ್ರ ಭಾರತದ  ಸಮಾಜದಲ್ಲಿ ಆರ್ಥಿಕ ಸಮೀಕರಣಗಳು ಬದಲಾಗಿವೆ. ಸೇವೆಗಳೆಲ್ಲ ಸಾಮಾಜಿಕ ಸ್ತರಗಳ ಆವರಣಗಳನ್ನು  ದಾಟಿ ಮಾರುಕಟ್ಟೆ-ಅರ್ಥವ್ಯವಸ್ಥೆಯ  ಮಾರುಕಟ್ಟೆಗೆ ಬಂದು ನಿಂತಿವೆ. ಸಾಮಾಜಿಕ ಸ್ಥಾನಮಾನಗಳನ್ನು ಮೀರಿ  ಆರ್ಥಿಕ ಸ್ಥಾನಮಾನಗಳು ಸೇವೆಗಳ ಹರಿವನ್ನು ನಿರ್ಧರಿಸುತ್ತಿವೆ. ಸ್ಥಿತಿವಂತ ಶೂದ್ರರು, ದಲಿತರು ಪುರೋಹಿತ ಮತ್ತು ಮೇಲು ವರ್ಗವೆಂದು ಕರೆಯಿಸಿಕೊಳ್ಳುವವರ ಸೇವೆಯನ್ನೂ ಪಡೆಯುವಂತಾಗಿದ್ದಾರೆಇನ್ನು ಪುರೋಹಿತ ವರ್ಗವು ಆರ್ಥಿಕವಾಗಿ ಸಬಲರಾಗುವ ಅನ್ಯ ಮಾರ್ಗಗಳನ್ನು ಶೋಧಿಸಿ ಅವುಗಳಲ್ಲಿ ತೊಡಗಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಮಾದಿಗರು, ಸಮಗಾರರು ತೊಡಗಿದ್ದ ಪಾದರಕ್ಷೆಗಳ ಉದ್ಯೋಗದಲ್ಲಿ ಈಗ  ಮೇಲು ವರ್ಗದವರು ತೊಡಗಿಕೊಂಡಿದ್ದಾರೆ. ನ್ಯೂಜಿಲ್ಯಾಂಡಿನಲ್ಲಿ ಕಮ್ಯೂನಿಕೇಷನ್ ಪದವಿ ಪಡೆದ ಶಶಾಂಕ್ ಭಾರಧ್ವಾಜ್ ಎಂಬುವವರು ಬೆಂಗಳೂರಿನ ಜಯನಗರದಲ್ಲಿ  ಹಳೆಯ  ಶೂಗಳನ್ನು ರಿಪೇರಿಮಾಡಿ ಸ್ವಚ್ಛಗೊಳಿಸುವ ಶೂ-ಲಾಂಡ್ರಿಯನ್ನು ತೆರೆದಿದ್ದಾರೆ. ಇನ್ನು, ವ್ಯವಹಾರ, ಶಿಕ್ಷಣ, ಉನ್ನತ ಉದ್ಯೋಗದಲ್ಲಿ ತೊಡಗಿ  ಆರ್ಥಿಕವಾಗಿ ಸಬಲರಾದ ದಲಿತರ ಮನೆಗಳಲ್ಲಿ ಹೊಸ ಧಾರ್ಮಿಕ ಆಚರಣೆಗಳು ಹುಟ್ಟಿಕೊಂಡಿವೆಉಳಿದಂತೆ ಪೌರೋಹಿತ್ಯವನ್ನೇ ಜೀವನಕ್ಕಾಗಿ ಅವಲಂಬಿಸಿರುವ ಜನರು ತಮ್ಮ ವೃತ್ತಿಯನ್ನು ವೃದ್ಧಿಸುವ ಅದನ್ನು ಆರ್ಥಿಕವಾಗಿ ಸದೃಢವಾದ ವೃತ್ತಿಯನ್ನಾಗಿ ರೂಪಿಸುವ, ಪೋಷಿಸುವ ಹಾಗೂ ಬೆಳೆಸುವಲ್ಲಿ ನಿರತರಾಗಿದ್ದಾರೆಇದರ ಪರಿಣಾಮವಾಗಿ ಬರೀ ಕುರಿ, ಕೋಳಿ, ಕೋಣಗಳನ್ನು ಕಡಿದು ಮಾರಮ್ಮನ ಹಬ್ಬ ಮಾಡುತ್ತಿದ್ದ ದಲಿತರ ಮನೆಗಳಲ್ಲಿ ಹೋಮ ಹವನ, ಸತ್ಯನಾರಾಯಣ ವೃತ, ಪೂಜೆ ಇತ್ಯಾದಿ ಆರಂಭವಾಗಿ ಸೋಮವಾರ, ಗುರುವಾರ ಮಾಂಸ ಸೇವನೆ ವರ್ಜ್ಯಮಾಡಬೇಕೆಂಬ ಹೊಸ ನಂಬಿಕೆಗಳು ಹುಟ್ಟುತ್ತಿವೆ.  ದ್ವೈತ, ಅದ್ವೈತ ತತ್ವಗಳ ನಡುವಿನ ತೀವ್ರ ತಾತ್ವಿಕ ಭಿನ್ನಾಭಿಪ್ರಾಯ ಅದರ ಗಂಧ ಗಾಳಿ ಅರಿಯದೆ ತಮ್ಮಷ್ಟಕ್ಕೆ ತಾವು ಇದ್ದ ಶೂದ್ರರು ತಮಗರಿವಿಲ್ಲದಂತೆಯೇ ತಮ್ಮ ಮೇಲೆ ಆದ ಪ್ರಭಾವದಿಂದ ದ್ವೈತ ಮಠಗಳ ಭಕ್ತರಾಗುತ್ತಿದ್ದಾರೆ. ಇದೊಂಥರ ಆಂತರಿಕ ಮತಾಂತರವೆಂದೇ ಹೇಳಬಹುದು; ಹೇಗೆಂದರೆ ಇಲ್ಲಿಯವರೆಗೆ ದ್ವೈತ ತತ್ವಪಾಲಿಸಿಕೊಂಡು ಬಂದವರು, ಅದ್ವೈತ ಸಿದ್ಧಾಂತ ಪಾಲಿಸಲು ಮುಂದಾದರೆ ಅದನ್ನು ಆಂತರಿಕ ಮತಾಂತರವೆಂದು ತಾನೆ ಹೇಳುವುದು.  

ದ್ವೈತ, ಅದ್ವೈತ ಯಾವುದರ ಗೊಡವೆಗೆ ಹೋಗದೆ ತಮ್ಮಷ್ಟಕ್ಕೆ ತಮ್ಮದೇ ದೇವರು, ಆಚರಣೆ, ನಂಬಿಕೆಗಳಲ್ಲಿ ತೊಡಗಿದ್ದ  ಶೂದ್ರರು ಏಕಾ ಏಕಿ  ದ್ವೈತ ಮಠಗಳಿಗೆ ಅಥವ ಅದ್ವೈತ ಮಠಗಳಿಗೆ ಹೋಗಲಾರಂಭಿಸಿದರೆ, ಅಲ್ಲಿನ ಆಚರಣೆಗಳನ್ನು, ನಂಬಿಕೆಗಳನ್ನು ಅನುಸರಿಸತೊಡಗಿದರೆ ಅದನ್ನು ಮತಾಂತರವೆಂದಲ್ಲದೆ ಏನೆಂದು ಕರೆಯಬೇಕು? ಅಷ್ಟಕ್ಕೂ ಹಿಂದೆಂದೂ ಹೀಗೆ ಮಾಡದ ಪುರೋಹಿತ ವರ್ಗವು, ಈಗ ಶೂದ್ರರಿಗೆ ವಿವೇಕವನ್ನು ತುಂಬುವ, ಅವರ ಆಚರಣೆಗಳನ್ನು ಮಾರ್ಪಡಿಸುವ, ಹೊಸ ಆಚರಣೆಗಳನ್ನು ಬಿತ್ತುವ, ಹೊಸ ನಂಬಿಕೆಗಳಲ್ಲಿ ಅವರನ್ನು ಬಂಧಿಸುವ ಕಾಯಕಕ್ಕೆ ಬಿದ್ದುದೇಕೆ? ಬದಲಾಗುತ್ತಿರುವ ಆರ್ಥಿಕ ಸಮೀಕರಣದಲ್ಲಿ ವಿದ್ಯಾವಂತ ಶೂದ್ರರು ತಮ್ಮ ಪಾರಂಪರಿಕ ಮನಸ್ಥಿತಿಯಿಂದ ಹೊರಬಂದು ವೈದಿಕ ಸಾಮಾಜದ ಸಂಕೊಲೆಗಳಿಂದ ಮುಕ್ತರಾಗಿ, ಸ್ವಾವಲಂಬನೆಯಿಂದ ಆರ್ಥಿಕವಾಗಿ ಸಧೃಢರಾಗತೊಡಗಿದಂತೆ ಪುರೋಹಿತ ಕಾಯಕಕ್ಕೆ ಉಳಿಗಾಲವಿಲ್ಲದಂತಾಯಿತು. ಹಲವರು ಈ ಪೌರೋಹಿತ್ಯವನ್ನು ತ್ಯಜಿಸಿ ಅನ್ಯ ಜೀವನಮಾರ್ಗವನ್ನು ಅರಸಿ ಹೋದರು; ಹೋಗಲಾಗದೆ ಉಳಿದವರು ಬದಲಾದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯಲ್ಲಿ ಪೌರೋಹಿತ್ಯವನ್ನು ಪುನರುಜ್ಜೀವನಗೊಳಿಸುವ ತನ್ಮೂಲಕ ತಮ್ಮ ಉಳಿವನ್ನು ಕಾಯ್ದುಕೊಳ್ಳುವ ಯೋಜನೆಗೆ ತೊಡಗಿದರು.
ಈ ಯೋಜನೆಯ ಹಂಚಿಕೆಯ ಫಲವಾಗಿ ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜ್ಯೋತಿಷ್ಯ, ಜಾತಕ ಫಲ ಶೂದ್ರರ ಆವರಣದೊಳಕ್ಕೆ ಕಾಲಿಟ್ಟವು. ಇವುಗಳಲ್ಲಿನ ದೋಷಗಳ ಪರಿಹಾರಕ್ಕೆ ಹೋಮ, ಹವನ, ವೃತ, ಪೂಜೆಗಳು ಶೂದ್ರರ ಮನೆ, ಮನಗಳಲ್ಲಿ ಪ್ರಬಲವಾಗಿ ಪುನರುಜ್ಜೀವನಗೊಂಡು ಹೊಸ ಆಚರಣೆಗಳು, ನಂಬಿಕೆಗಳು   ಹೊಸ ತಲೆಮಾರನ್ನು ಬಂಧಿಸಿ ಆಧೀರರನ್ನಾಗಿಸಿವೆ. ಇಂಥಹ ಜಾಲದಲ್ಲಿ ಶೂದ್ರರ ಹೊಸತಲೆಮಾರು ಸಿಲುಕಿಕೊಂಡಷ್ಟು, ಸ್ವಾತಂತ್ರೋತ್ತರದಲ್ಲಿ ಪಾರಂಪರಿಕ ಮನಸ್ಥಿತಿಯಿಂದ ಹೊರಬಂದು ವೈದಿಕ ಸಾಮಾಜದ ಸಂಕೊಲೆಗಳಿಂದ ಮುಕ್ತರಾಗಿ, ಸ್ವಾವಲಂಬನೆಯಿಂದ ಆರ್ಥಿಕವಾಗಿ ಸಧೃಢವಾದ ಅವರ ಹಿಂದಿನ ತಲೆಮಾರು ಸಿಲುಕಲಿಲ್ಲ. ಹೊಸ ತಲೆಮಾರಿವರು ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರದ ಪ್ರಭಾವಕ್ಕೊಳಗಾಗಿ ಅಧೀರರಾಗಿ ತಮ್ಮ ಅಜ್ಜಂದಿರು ಕಟ್ಟಿ ನೂರಾರು ವರ್ಷ ಬಾಳಿ ಬದುಕಿದ ಮನೆಯ ಗೋಡೆಗಳನ್ನು ವಾಸ್ತುದೋಷವಿದೆ ಎಂದು ಒಡೆದು ಸ್ನಾನದ ಮನೆಯನ್ನು ಮಲಗುವ ಕೋಣೆಯನ್ನಾಗಿ ಪರಿವರ್ತಿಸುವಲ್ಲಿ ಅಥವ ತಮ್ಮ ಅಪ್ಪ-ಅಮ್ಮಂದಿರು ಇಟ್ಟ ಹೆಸರನ್ನು ಸಂಖ್ಯಾಶಾಸ್ತ್ರಜ್ಞರು ಹೇಳುವಂತೆ ಬದಲಾಯಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದಾರೆ.

ತಮ್ಮನ್ನು ಹೊಸದಾಗಿ ಆವರಿಸಿ, ಬಂಧಿಸಿರುವ ಹೊಸ ಆಚರಣೆಗಳು, ನಂಬಿಕೆಗಳು ಶೂದ್ರರ ಬದುಕನ್ನು ನಿರಂತರವಾಗಿ ಮತ್ತೆ ಪುರೋಹಿತ ವರ್ಗದ ಪ್ರಭಾವದ ದಾಸ್ಯದೊಳಕ್ಕೆ ನೂಕುತ್ತಿವೆ. ಹೀಗೆ ಬಿತ್ತಲ್ಪಟ್ಟ ಆಚರಣೆಗಳನ್ನು, ನಂಬಿಕೆಗಳನ್ನು ಶೂದ್ರರ ಹೊಸ ತಲೆಮಾರು ಅನುಸರಿಸತೊಡಗಿದರೆ ಮುಂದಿನ ಎರಡು ಮೂರು ಶತಮಾನಗಳವರೆಗೆ ಶೂದ್ರರು ತಮ್ಮ ಶ್ರಮದ ಫಲವನ್ನು ಅವರ ದೇವರುಗಳಿಗೆ, ಅವರ ಮಠಗಳಿಗೆ ಅರ್ಪಿಸಿ ತಮ್ಮ ಗಳಿಕೆಯ ಭಾಗವೊಂದನ್ನು ಕಾಣಿಕೆಯ, ದಕ್ಷಿಣೆಯ ರೂಪದಲ್ಲಿ ನಿರಂತರವಾಗಿ ಸಲ್ಲಿಸುವುದರಲ್ಲಿ ಸಂದೇಹವೇ ಇಲ್ಲ. ಮುಂದುವರಿದು, ವ್ಯವಸ್ಥಿತವಾಗಿ ಶೂದ್ರರ ಒಡನಾಟ ಅವರ ಮಠಗಳಿಗೆ, ಅವರ ದೇವರುಗಳಿಗೆ ನಿರಂತರವಾಗಿ ಇರುವಂತೆ ಅವರನ್ನು ಹೊಸ-ಹೊಸ ನಂಬಿಕೆಗಳಲ್ಲಿ, ಅಚರಣೆಗಳಲ್ಲಿ ಬಂಧಿಸಲಾಗುವುದು. ಒಟ್ಟಿನಲ್ಲಿ  ಪೌರೋಹಿತ್ಯವು  ತನ್ನ ಹೊಸ ನೆಲೆಯಲ್ಲಿ ಪುನರುಜ್ಜೀವನ ಗೊಂಡು, ವೈದಿಕ ಸಂಕೊಲೆಗಳಿಂದ ಮುಕ್ತರಾದ ಶೂದ್ರರನ್ನೂ ಮೌಢ್ಯದ ದಾಸ್ಯದೊಳಕ್ಕೆ ಪುನಃ ತಳ್ಳುತ್ತಿದೆ.
ತಮ್ಮ ಉಳಿವಿಗಾಗಿ ಧಾರ್ಮಿಕ ಕೇಂದ್ರಗಳು ಪೊರೆಯುವ  ಆಚರಣೆಗಳು, ನಂಬಿಕೆಗಳು ಬದಲಾಗುತ್ತಿರುವ ಸಮಾಜಕ್ಕೆ ಕಂಟಕಕಾರಿಯಾಗುವಂತಿದ್ದರೂ ಅವುಗಳನ್ನು ಸುಧಾರಿಸುವ, ಬದಲಾಯಿಸುವ ಅಥವ ನಿಲ್ಲಿಸುವ ಯೋಚನೆಯನ್ನು ಮಾಡುವುದಿಲ್ಲ. ಬದಲಿಗೆ ದೇವರ ಹೆಸರಿನಲ್ಲಿ, ಭಕ್ತರ ಶ್ರಮದ ಫಲವನ್ನು ದೇವರ ಕೃಪೆಗೆ ಆರೋಪಿಸುವಇನ್ನಷ್ಟು ಮೌಢ್ಯವನ್ನು ಸೃಷ್ಟಿಸಿ ಜನರು ಸದಾ ನಂಬಿಕೆಗಳ, ಮೌಢ್ಯಗಳ, ತನ್ಮೂಲಕ ಧಾರ್ಮಿಕ  ಕೇಂದ್ರಗಳ ಸುತ್ತ ಗಿರಕಿ ಹೊಡೆಯುವಂತೆ ನಂಬಿಕೆಗಳ, ಆಚರಣೆಗಳ ಜಾಲವನ್ನೇ ಹೆಣೆಯಲಾಗುತ್ತಿದೆ. ಹೀಗೆ ಆರ್ಥಿಕ ನೆಲೆಯಲ್ಲಿ ಪುನರುಜ್ಜೀವನಗೊಳ್ಳುವ ಮೌಢ್ಯವು ಬಲಿಷ್ಟವಾಗಿದ್ದು ಎಲ್ಲ ರೀತಿಯಲ್ಲೂ ತನ್ನನ್ನು ರಕ್ಷಿಸಿಕೊಳ್ಳುವ ತಂತ್ರಗಾರಿಕೆಯನ್ನು, ಹಂಚಿಕೆಯನ್ನು ಹೊಂದಿರುತ್ತದೆ. ದೇಹದೊಳಕ್ಕೆ ಸೇರಿಕೊಳ್ಳುವ ವೈರಸ್ ಜೀವಕೋಶದೊಳಗೆ ಹೊಕ್ಕು ತನ್ನ ತದ್ರೂಪನ್ನೇ ಸೃಷ್ಟಿಸುವಂತೆ, ಡಿ.ಎನ್. ಅನ್ನು ಮಾರ್ಪಡಿಸುವಂತೆ, ಇವು ಜನರ ಮನದಾಳಕ್ಕಿಳಿದು, ಜನರೇ ಸ್ವಯಂ ಇವುಗಳನ್ನು ಪೊರೆದು ಪೋಷಿಸುವಂತೆ ಅವರ ಮನಸ್ಸನ್ನು ಆವರಿಸಿ ಬಿಡುತ್ತವೆ. ಇವು ದೇಶದ ಕಾನೂನನ್ನೂ ಯಾಮಾರಿಸಿ, ರಂಗೋಲಿಯ ಕೆಳಗೆ ತೂರುವಷ್ಟು ನಯವಂಚಕತನವನ್ನು ಮೈಗೂಡಿಸಿಕೊಂಡಿವೆ. ಮಡೆ ಸ್ನಾನ, ಪಂಕ್ತಿ ಭೇಧ, ವರ್ಣಾಶ್ರಮಾಚರಣೆಗಳೆಲ್ಲವೂ  ಇಂಥಹ ವ್ವವಸ್ಥಿತ ಜಾಲದ ಸುಳಿಗೆ ಸಿಕ್ಕ ಕರಾಳ, ಅಮಾನವೀಯ, ತಾರತಮ್ಯದ ಆಚರಣೆಗಳಾಗಿವೆ. ಇವುಗಳ ಪೋಷಕರು ಭಾರತದ ಸಮೃದ್ಧ ಸಂಸ್ಕೃತಿಯನ್ನು ಕಾಪಿಡುವ, ಸಂರಕ್ಷಿಸುವ ಕಾನೂನಿನಡಿಯಲ್ಲಿ ನ್ಯಾಯಾಲಯಗಳನ್ನು ದಿಕ್ಕು ತಪ್ಪಿಸಿ ಈ ಕಾನೂನಿನಡಿಯಲ್ಲೇ ಆಸರೆ ಪಡೆಯುವ, ಉಳಿಯುವ ಹಂಚಿಕೆಯಲ್ಲಿವೆ.
ಇದನ್ನು ಗ್ರಹಿಸಿಯೇ ಕುವೆಂಪು ಹೇಳಿದ್ದು:

ನೂರು ದೇವರನೆಲ್ಲ ನೂಕಾಚೆ ದೂರ
ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ....

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೇ ದೇವಿ....

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಘಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ
ಭಾರತಾಂಬೆಯೇ ದೇವಿ ನಮಗಿಂದು...

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಬಲೆಯನು ಒಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು.
ಭಾರತಾಂಬೆಯೇ ದೇವಿ ನಮಗಿಂದು
ಪೂಜಿಸುವ ಬಾರಾ ಬಾರಾ.

No comments:

Post a Comment