Friday, December 12, 2014

ಶೈಲೇಂದ್ರನೆಂಬ ಮಾಂತ್ರಿಕ



1947 ಪೂರ್ವಾರ್ಧ; ಸ್ವಾತಂತ್ರ್ಯ ಆಂದೋಲನ ಉತ್ತುಂಗಕ್ಕೇರಿದ್ದ ಸಮಯ; ಅಂದಿನ ಬಾಂಬೆಯ ಒಂದು ಜನನಿಬಿಡ ಸ್ಥಳವೊಂದರಲ್ಲಿ ಸ್ವಾತಂತ್ರ್ಯ ಆಂದೋಲನದ ಒಂದು ಸಾರ್ವಜನಿಕ ಸಭೆಯಲ್ಲಿ ಆವೇಶಭರಿತ ಭಾಷಣಗಳ ನಡುವೆ ಒಬ್ಬ 24 ಉತ್ಸಾಹಿ ತರುಣನೊಬ್ಬ 'ಜಲ್ತಾಹೆ ಪಂಜಾಬ್' (ಹೊತ್ತಿ ಉರಿಯುವ ಪಂಜಾಬ್) ಎಂಬ ತನ್ನ ಕವಿತೆಯೊಂದನ್ನು ಓದಲು ತೊಡಗುತ್ತಾನೆ. ಭಾರತ ವಿಭಜನೆಯ ಹೊಸಿಲಲ್ಲಿ ಇಬ್ಭಾಗವಾಗಿ ಹೋಗುವ ಪಂಜಾಬ್ ಹೊತ್ತಿ ಉರಿಯುವುದರ ಸಂಕಟವನ್ನು ಕಣ್ಣಿಗೆ ಕಟ್ಟುವಂತೆ ಪದಗಳಲ್ಲಿ ಮುತ್ತುಗಳನ್ನು ಪೋಣಿಸಿದಂತೆ ಬರೆದ ಕವಿತೆಯನ್ನು ಓದಿ ಮುಗಿಸಿದ ಕ್ಷಣದಲ್ಲಿ ಮತ್ತೋರ್ವ ಯುವಕ ಯುವ ಕವಿಯೆಡೆಗೆ ಬಂದು ಆತ್ಮೀಯ ಭಾವದಲ್ಲಿ, ಕವಿತೆಯನ್ನು, ಅದನ್ನು ಬರೆದ ಕವಿಯನ್ನು ಶ್ಲಾಘಿಸುತ್ತಾ, ತಾನು ಖ್ಯಾತ ಸಿನಿಮಾ ನಟ, ನಿರ್ಮಾತೃ  ಪೃಥ್ವಿರಾಜ್ ಕಪೂರ್ ರವರ ಪುತ್ರ, ರಾಜ್ ಕಪೂರ್ ಎಂದು ಪರಿಚಯಮಾಡಿಕೊಳ್ಳುತ್ತಾನೆ. ಚಿತ್ರೀಕರಣಗೊಳ್ಳುತ್ತಿರುವ ತನ್ನ ಸಿನಿಮಾ 'ಆಗ್' ಹಾಡಿಗೆ ಕವಿತೆಯು ಹೇಳಿ ಮಾಡಿಸಿದಂತಿದ್ದು ಅದನ್ನು ತಾನು ಖರೀದಿಸಲು ಉತ್ಸುಕನಾಗಿರುವುದಾಗಿ ಹೇಳುತ್ತಾನೆ.  ತಮ್ಮ ಹಾಡುಗಳನ್ನು, ಕಥೆಗಳನ್ನು ಚಿತ್ರ ನಿರ್ಮಾಪಕರ ಬಾಗಿಲಿಗೆ ಒಯ್ದು ಅಲೆದಾಡುವ ಜನರನ್ನು ಕಾಣುತ್ತಿದ್ದ ರಾಜ್ ಕಪೂರ್ ಗೆ ತನ್ನ ಪ್ರಸ್ತಾವನೆಯನ್ನು ಯುವ ಕವಿ ಉತ್ಸಾಹ, ಋಣಭಾವದಲ್ಲಿ ಸ್ವೀಕರಿಸಬಹುದೆಂಬ ದೃಢ ವಿಶ್ವಾಸದಲ್ಲಿ, ತನ್ನ ಅಹಂಕಾರವನ್ನು ಮೆರೆಯದೆ,  ಕೋಮಲವಾದ ಸೂಕ್ಷ್ಮ ಕವಿ ಹೃದಯಕ್ಕೆ ಧಕ್ಕೆ ತರದಂತೆ ತನ್ನೆಲ್ಲ ಸೌಜನ್ಯದಿಂದ ಕೇಳುತ್ತಾನೆ.  ಸ್ವಾತಂತ್ರ ಆಂದೋಲನದಲ್ಲಿ ಮುಳುಗಿ, ದೇಶಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಯುವ ಕವಿ ಕ್ಷಣ ವಿಚಲಿತನಾಗಿ  ನನ್ನ ಕವಿತೆ ಮಾರಾಟಕ್ಕಿಲ್ಲಎಂದು ಖಡಾತುಂಡವಾಗಿ ತರುಣನ ಮುಖಕ್ಕೆ ಹೊಡೆದಂತೆ ಹೇಳುತ್ತಾನೆ. ಇದರಿಂದ ಸ್ವಲ್ಪವೂ ಬೇಸರಗೊಳ್ಳದ ತರುಣ, ತನ್ನ ಜೇಬಿನಿಂದ ಕಾಗದದ ತುಂಡೊಂದನ್ನು ತೆಗೆದು ಅದರಲ್ಲಿ ತನ್ನ ಹೆಸರು ವಿಳಾಸವನ್ನು ಬರೆದು ಯುವ ಕವಿಗೆ ನೀಡುತ್ತಾಮುಂದೊಂದು ದಿನ ನಿಮ್ಮ ನಿರ್ಧಾರ ಬದಲಾದರೆ, ನನ್ನನ್ನು ವಿಳಾಸದಲ್ಲಿ ಸಂಪರ್ಕಿಸಬಹುದು  ಎಂದು  ಹೇಳಿ ಹೋಗುತ್ತಾನೆ.

ಬಿಹಾರ ಮೂಲದ ಕೇಸರಿಲಾಲ್- ಪಾರ್ವತಿದೇವಿ ತಮ್ಮ ಕುಟುಂಬದೊಂದಿಗೆ ಜೀವನಕ್ಕಾಗಿ ಇಂದಿನ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿಗೆ ವಲಸೆ ಹೋಗುತ್ತಾರೆ. ಅಲ್ಲಿ, ಅವರಿಗೆ 1923 ಆಗಸ್ಟ್ 30 ರಂದು ಒಂದು ಗಂಡು ಮಗುವಿನ ಜನನವಾಗುತ್ತದೆ. ಮಗುವಿಗೆ ಶಂಕರ್ ದಾಸ್  ಎಂದು ನಾಮಕರಣ ಮಾಡುತ್ತಾರೆ.  ಮಗು ಬಾಲ್ಯಾವಸ್ತೆಯಲ್ಲಿರುವಾಗ ಕುಟುಂಬ ಇಂದಿನ ಮಥುರಾ ಪಟ್ಟಣಕ್ಕೆ ವಲಸೆ ಬರುತ್ತದೆ. ಶಂಕರ್ ದಾಸ್ ಇನ್ನೂ ಹದಿ ಹರೆಯದಲ್ಲಿರುವಾಗ ತನ್ನ ತಾಯಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಇನ್ನೇನು ಬದುಕುವುದೇ ಕಷ್ಟವೆಂದು ತೋರಿದಾಗ ದೇವರಲ್ಲಿ ಮೊರೆ ಇಡುತ್ತಾನೆ; ಬರಿಗಾಲಿನಲ್ಲಿ ಮಥುರಾದ ಉರಿ ಬಿಸಿಲಿನಲ್ಲಿ ಎಲ್ಲ ದೇವಸ್ಥಾನಗಳಿಗೆ ಎಡತಾಕುತ್ತಾನೆ, ಪ್ರಾರ್ಥಿಸುತ್ತಾನೆ; ಕಡೆಗೆ ತಾಯಿ ಉಳಿಯುವುದಿಲ್ಲ; ದೇವರಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾನೆ. ಅಲ್ಲಿಂದ ಮುಂದೆ ತನ್ನ ಇಡೀ ಜೀವನದಲ್ಲಿ ದೇವರನ್ನು ನಂಬದ ನಾಸ್ತಿಕನಾಗುತ್ತಾನೆ. ಕಷ್ಟ-ಕಾರ್ಪಣ್ಯದಲ್ಲಿ, ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರತೀಕವಾದ ಮಥುರಾದಲ್ಲಿ ಬೆಳೆದ ಹುಡುಗ, ಭಾಷೆ, ಸಂಸ್ಕೃತಿ, ಜೀವನದರ್ಶನವನ್ನೆಲ್ಲಾ ತನ್ನ ಸಣ್ಣ ವಯಸ್ಸಿನಲ್ಲಿಯೇ ಮೈಗೂಡಿಸಿಕೊಳ್ಳುತ್ತಾನೆ.  ಓದಿನ ನಡುವೆ ಆಗಾಗ ತನ್ನ ಜೀವನದ ಅನುಭವಗಳನ್ನು ಕವಿತೆಯ ರೂಪದಲ್ಲಿ ಬರೆಯಲಾರಂಭಿಸುತ್ತಾನೆ. ಅವನ ಗೆಳೆಯರು ಈತನ ಕವಿತೆಯನ್ನು ಮೆಚ್ಚುವಷ್ಟು ಪ್ರಬುದ್ಧರಾಗಿರಲಿಲ್ಲ. ಅವರೆಲ್ಲರೂ ಇವನನ್ನು ಅರ್ಥವಿಲ್ಲದ್ದನ್ನು ಗೀಚುವವನೆಂದು ಆಡಿಕೊಳ್ಳುತ್ತಿದ್ದರು. ಜೀವನ ನಿರ್ವಹಿಸುವುದು  ಕಷ್ಟವಾದ್ದರಿಂದ ಓದನ್ನು ಕೈಬಿಟ್ಟು ಭಾರತೀಯ ರೈಲ್ವೆಯಲ್ಲಿ ವೆಲ್ಡರನಾಗಿ ನೌಕರಿಗೆ ಸೇರಿ ತರಬೇತಿಗೆಂದು ಆಗ್ರಾ ಪಟ್ಟಣಕ್ಕೆ ಬರುತ್ತಾನೆ. ಅಲ್ಲಿ ತನ್ನ ತರಬೇತಿಯ ನಡುವೆ ಈತ ಬರೆಯುತ್ತಿದ್ದ ಕವಿತೆಗೆ, ಈತನ ವ್ಯಕ್ತಿತ್ವಕ್ಕೆ ಮಾರುಹೋದ ಯುವತಿಯೊಬ್ಬಳು ಇವನ ಒಡನಾಟಕ್ಕೆ ಬೀಳುತ್ತಾಳೆ; ಅವಳಲ್ಲಿ ಇವನಿಗೆ ಪ್ರೇಮಾಂಕುರವಾಗುತ್ತದೆ. ಆದರೆ, ಬಡತನದಲ್ಲಿದ್ದ ಇವನ ಕುಟುಂಬವನ್ನು ಮತ್ತು   ಇದ್ದುದರಲ್ಲಿ ಸ್ಥಿತಿವಂತರಾದ ಯುವತಿಯ ಕುಟುಂಬವನ್ನು ಬೆಸೆಯುವ ಯಾವ ಸಮಾನ ಲಕ್ಷಣಗಳು ಇರಲಿಲ್ಲ.  ನಡುವೆ ಯುವತಿಯ ಅಕ್ಕನ ಮದುವೆಯು ಒಬ್ಬ ವೈದ್ಯ ವರನೊಂದಿಗೆ ನಿಗದಿಯಾಗುತ್ತದೆ. ಸಂಧರ್ಭದಲ್ಲಿ ಶಂಕರ್ ದಾಸ್  ಸ್ವಲ್ಪ ಧೈರ್ಯಮಾಡಿ ಯುವತಿಯ ತಂದೆಯನ್ನು ಭೇಟಿಮಾಡಿ ತನ್ನ ಮತ್ತು ಅವರ ಮಗಳ ನಡುವಿನ ಪ್ರೇಮದ ವಿಷಯ ಪ್ರಸ್ತಾಪ ಮಾಡಿ ಮದುವೆ ಮಾಡಿ ಕೊಡುವಂತೆ ಕೇಳುವ ಧೈರ್ಯ ಮಾಡುತ್ತಾನೆ. ಇವನ ಪ್ರಸ್ತಾಪವನ್ನು ಕೇಳಿ ಯುವತಿಯ ಕುಟುಂಬದವರು ಹೌಹಾರುತ್ತಾರೆ. ರೈಲ್ವೆಯ ಮೆಕ್ಯಾನಿಕ್ ಗೂ ಅವರಿಗೂ ಎಲ್ಲಿಯ ಸಾಟಿ!  ಆದರೆ, ಯುವತಿಯ ತಂದೆ ಈತನ ನೇರ, ಸರಳ ವ್ಯಕ್ತಿತ್ವ, ಈತನ ಪ್ರಾಮಾಣಿಕತೆಯನ್ನು ಮೆಚ್ಚಿಕೊಳ್ಳುತ್ತಾರೆ. ನೌಕರಿ ಸಣ್ಣದಾದರೂ ಪ್ರೀತಿಸಿದ ತಮ್ಮ ಮಗಳನ್ನು ಚೆನ್ನಾಗಿ ನೋಡಿಕೊಳ್ಳುವವನೆಂದು ಅವರಿಗೆ ತೋರುತ್ತದೆ; ಅವರ ಹಿರಿಯ ಮಗಳ ಮದುವೆಯೊಂದಿಗೆ ಇವರ ಮದುವೆಯನ್ನೂ ಯುವತಿಯ ತಂದೆ ಮಾಡುತ್ತಾರೆ. ತರಬೇತಿಯ ನಂತರ ಶಂಕರ್ ದಾಸ್ ಗೆ ಬಾಂಬೆಯ ರೈಲ್ವೆ ವರ್ಕ್ ಶಾಪಿಗೆ  ಪೋಸ್ಟಿಂಗ್ ಆಗುತ್ತದೆ.  ತನ್ನ ಪ್ರೀತಿಯ ಮಡದಿಯೊಂದಿಗೆ ಬಾಂಬೆಯಲ್ಲಿ ಒಂದು ಕೊಠಡಿಯ ಹಳೆಯ ಮನೆಯೊಂದರಲ್ಲಿ ಸಂಸಾರ  ಹೂಡುತ್ತಾನೆ. ಸಾಲದ ಸಂಬಳ, ಆಕಾಶದಷ್ಟು ಆಸೆಗಳು, ಕನಸುಗಳು ಕಣ್ಣಲ್ಲೇ ಕರಗಿ ಹೋಗುತ್ತಿದ್ದವು. ಒಂದೊಂದು ದಿನ ಇರುವ ಒಂದೇ ಆಲೂ ಗೆಡ್ಡೆಯನ್ನು ಮಧ್ಯಾನದ ಊಟಕ್ಕೆ ಬಳಸುವುದೋ ಅಥವ ರಾತ್ರಿಯೂಟಕ್ಕೋ ಎನ್ನುವಷ್ಟು ಬಡತನ. ಈತನಿಗೆ ಸಂಕಟ;  ಸುಖವಾಗಿ ಬೆಳೆದಿದ್ದ ತನ್ನ ಹೆಂಡತಿಗೆ ಒಂದು ಹೊತ್ತಿನ ಊಟವನ್ನೂ ಚೆನ್ನಾಗಿ ಕೊಡಲಾಗುತ್ತಿಲ್ಲವಲ್ಲ ಎಂಬ ಕೊರಗು, ಸಂಕಟ. ಇಂಥಹ ಸ್ಥಿತಿಯಲ್ಲಿ ಹೆಂಡತಿ ಗರ್ಭಿಣಿಯಾಗುತ್ತಾಳೆ; ಅವಳ ಪುಷ್ಠಿಗೆ ಒಳ್ಳೆಯಾ ಆಹಾರ ತಂದು ಕೊಡಲು, ಅತ್ತ ತವರಿಗೆ ಕಳುಹಿಸಲೂ ಕಿಸೆಯಲ್ಲಿ ಹಣವಿಲ್ಲ.   ಸ್ಥಿತಿಯಲ್ಲಿ ತನ್ನ ಕವಿತೆಯನ್ನು ಕೊಳ್ಳಲು ಬಂದಿದ್ದ ಅಂದಿನ ಪ್ರಸಿದ್ಧ ನಟ, ಸಿನಿಮಾ ನಿರ್ಮಾತೃ ಆಗಿದ್ದ ಪೃಥ್ವಿರಾಜ್ ಕಪೂರರ ಮಗನ ನೆನಪಾಗುತ್ತದೆ. ಅಂದು ಅವನು ಕೊಟ್ಟಿದ್ದ ಕಾಗದದ ತುಣುಕನ್ನು ಹುಡುಕುತ್ತಾನೆ; ಅದರಲ್ಲಿನ ವಿಳಾಸವನ್ನು ಹುಡುಕಿ ತರುಣನನ್ನು ಭೇಟಿಮಾಡಿ ಈಗ ತನಗೆ ಹಣದ ಅವಶ್ಯಕತೆ ಇರುವುದಾಗಿಯೂ, ತುರ್ತಾಗಿ ಐದುನೂರು ರೂಪಾಯಿ ಕೊಟ್ಟರೆ ಕಂತುಗಳಲ್ಲಿ ಅದನ್ನು ಹಿಂತಿರುಗಿಸುವುದಾಗಿ ಹೇಳುತ್ತಾನೆ. ರಾಜ್ ಕಪೂರ್ ಕೂಡಲೆ ಐದುನೂರು ರೂಪಾಯಿಗಳನ್ನು ಕೊಟ್ಟು ಕಳುಹಿಸುತ್ತಾನೆ. ಒಂದು ದಿನ ಪಡೆದ ಹಣವನ್ನು ಹಿಂದಿರುಗಿಸಲು ಶಂಕರ್ ದಾಸ್, ರಾಜ್ ಕಪೂರ್ ಬಳಿ ಬಂದಾಗ ಪ್ರೀತಿಯಿಂದ ಅದನ್ನು ವಾಪಾಸು ಶಂಕರ್ ದಾಸ್ ಕಿಸೆಗಿಟ್ಟು  ಬರ್ಸಾತ್ಎಂಬ ತನ್ನದೊಂದು ಸಿನಿಮಾ ಚಿತ್ರೀಕರಣವಾಗುತ್ತಿದೆ ಅದಕ್ಕೆ ಹಾಡು ಬರೆದು ಕೊಡುವಂತೆ ರಾಜ್ ಕಪೂರ್ ಹೇಳುತ್ತಾನೆ. ಅಷ್ಟೊತ್ತಿಗೆ ಚಿತ್ರಕ್ಕೆ ಖ್ಯಾತ ಗೀತಕಾರರಾದ ಹಜರತ್ ಜಯಪುರಿಯವರಿಂದ ಆರು, ಜಲಾಲ್ ಮಲಿಹಾಬಾದಿಯವರಿಂದ ಒಂದು, ರಮೇಶ್ ಶಾಸ್ತ್ರಿಯವರಿಂದ ಒಂದು ಮತ್ತು ಶಂಕರ್ ಜೈಕಿಶನ್ ರವರಿಂದ ಒಂದು, ಒಟ್ಟು ಒಂಭತ್ತು ಹಾಡುಗಳನ್ನು ಬರೆಸಿ ಅಂದಿನ ಖ್ಯಾತ ಸಂಗೀತ ನಿರ್ದೇಶಕ ಜೋಡಿ ಶಂಕರ-ಜೈಕಿಶನರಿಂದ ಸಂಗೀತ ಸಂಯೋಜನೆ ಮಾಡಿಸಲಾಗಿರುತ್ತದೆ.  ಆದಾಗ್ಯೂ, ಶಂಕರ್ ದಾಸ್ ಪಾಂಡಿತ್ಯದಿಂದ ಅದೆಂತಹ ಹಾಡು ಹೊಮ್ಮ ಬಹುದೆಂಬ ಕುತೂಹಲಕ್ಕೆ ಮತ್ತೆರಡು ಹಾಡುಗಳನ್ನು ಬರೆಯುವಂತೆ ರಾಜ್ ಕಪೂರ್ ಹೇಳುತ್ತಾನೆ. ‘ಶೈಲೇಂದ್ರಎಂಬ ಕಾವ್ಯನಾಮದಲ್ಲಿ ಆಗ ಬರೆದದ್ದೇಬರ್ಸಾತ್ ಮೆ.. ಹಮ್ ಸೆ ಮಿಲೆ ತುಮ್”.  ಮತ್ತು  ಪತಲಿ ಕಮರ್ ಹೈ  ಎಂಬ  ಎರಡು ಹಾಡುಗಳು.  ಬರ್ಸಾತ್ ಮೆ ಹಮ್ ಸೆ ಮಿಲೆ ತುಮ್   ಹಾಡಿನ ಸರಳ ಸುಂದರ ಸಾಲುಗಳು ಪ್ರೇಮಿಗಳ ಹೃದಯದ ಮಿಡಿತವನ್ನು ಅಷ್ಟು ಗಾಢವಾಗಿ ಹಿಡಿದಿಟ್ಟಿದ್ದು ತುಂಬ ರೊಮ್ಯಾಂಟಿಕ್ ಆದ ರಾಜ್ ಕಪೂರನನ್ನು ಕ್ಷಣ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಅಲ್ಲಿಯವರೆಗೂ ಉರ್ದು ಶಾಯರಿಯುಕ್ತ ಘಜಲ್ ಗಳಿಂದ ಪ್ರೇರಿತವಾದ ಗೀತೆಗಳನ್ನು ಕೇಳಿದ್ದ ರಾಜ್ ಕಪೂರ್ ಗೆ ಈ ಸರಳ ಸುಂದರ ಸಾಲುಗಳು ಮೋಹಕವಾಗಿ ಕಾಣುತ್ತವೆ;  ಆಗ ಶಂಕರ್ ದಾಸ್ ನನ್ನು ಅಪ್ಪಿ, ಇನ್ನು ಮುಂದೆ ತನ್ನೆಲ್ಲ ಸಿನಿಮಾಗಳಿಗೆ ನೀನು ಹಾಡುಗಳನ್ನು ಬರೆಯಬೇಕೆಂದು ಹೇಳಿ ತನ್ನ ಪ್ರೊಡಕ್ಷನ್ ಕಂಪನಿಯಲ್ಲಿ ತಿಂಗಳಿಗೆ ಐದು ನೂರು ರೂಪಾಯಿಗಳ ಸಂಬಳಕ್ಕೆ ಶಂಕರ್ ದಾಸ್ ನನ್ನು ಒಪ್ಪಿಸುತ್ತಾನೆ.  ಹಾಡು ಚಿತ್ರದ ಟೈಟಲ್ ಸಾಂಗ್ ಆಯ್ತು.  ಮುಂದೆ ಬರ್ಸಾತ್ ಸಿನಿಮಾ ಬಿಡುಗಡೆಯಾಗಿ ಅದ್ಭುತವಾದ  ಯಶಸ್ಸು ಕಂಡಿತು. ಎಲ್ಲರ ಬಾಯಲ್ಲಿ ಇದೇ ಹಾಡು; ಇಷ್ಟು ಸರಳವಾದ ಪದಗಳಲ್ಲಿ  ಭಾವಗಳನ್ನು ಮನ ಮುಟ್ಟುವಂತೆ ಬರೆದವರು ಯಾರು ಎಂದು ತಿಳಿಯಲು ಎಲ್ಲರೂ ಕಾತುರರಾಗಿದ್ದರು.  ಯಾರು ಶೈಲೇಂದ್ರ  ಎಂದು ಎಲ್ಲರೂ ಕೇಳುವಂತಾಯಿತು. ಅಲ್ಲಿಂದ ಶೈಲೇಂದ್ರ ಖ್ಯಾತಿವೆತ್ತ  ಗೀತಕಾರರಾದರು. ನಿರ್ಮಾಪಕರು ಇವರ ಬಾಗಿಲು ತಟ್ಟಲಾರಂಭಿಸಿದರು. ಶೈಲೇಂದ್ರರು ಉತ್ತುಂಗದಲ್ಲಿದ್ದಾಗ ಆನಂದ್ ಸಹೋದರರಾದ ದೇವರ ಆನಂದ್ ಮತ್ತು ವಿಜಯ್ ಆನಂದ್ ಆರ್.ಕೆ.ನಾರಾಯಣ್ ' ಗೈಡ್' ಅನ್ನು ಸಿನಿಮಾ ಮಾಡುವ ಯೋಜನೆಯಲ್ಲಿ ಅಂದಿನ ಗೀತಕಾರರಾದ  ಹಝರತ್ ಜೈಪುರಿ ಯವರನ್ನು ಗೊತ್ತುಪಡಿಸಿರುತ್ತಾರೆ; ಆದರೆ ಅವರ ಶಾಯರಿ ಶೈಲಿಯ ಗೀತೆಗಳು ತಮ್ಮ  ಗೈಡ್ ಸಿನಿಮಾಕ್ಕೆ ಹೊಂದುವುದಿಲ್ಲ ಎಂದು ಆನಂದ್ ಸಹೋದರರಿಗೆ ಅನಿಸುತ್ತದೆ. ಜನ ಸಾಮಾನ್ಯರ ಬಾಯಲ್ಲಿ ಹರಿದಾಡುವ ಸರಳ ಪದಗಳಲ್ಲಿ ಗಹನವಾದ ಜೀವನಸಾರ ಅಡಗಿರುವ ಗೀತೆಗಳು ಅವರಿಗೆ ಬೇಕಾಗಿತ್ತು. ಅಂದು ಇಂತಹ ಗೀತೆಗಳನ್ನು ಶೈಲೇಂದ್ರ ಮಾತ್ರ ಬರೆಯುತ್ತಿದ್ದರು. ಹಝರತ್ ಜೈಪುರಿಯವರ ಗೀತೆಗಳನ್ನು ಬದಿಗೊತ್ತಿ ಶೈಲೇಂದ್ರರನ್ನು ಸಂಪರ್ಕಿಸಿ ತಮ್ಮ ಗೈಡ್ ಸಿನಿಮಾಕ್ಕೆ ಗೀತೆಗಳನ್ನು ಬರೆಯುವಂತೆ ಕೇಳುತ್ತಾರೆ.  ಸೂಕ್ಷ್ಮ ಮನಸ್ಸಿನ ಸ್ವಾಭಿಮಾನಿಯಾದ ಶೈಲೇಂದ್ರರಿಗೆ ಅವರ ಪ್ರಸ್ತಾವನೆ ಮತ್ತು ಅದರ ಹಿಂದಿನ ಯೋಚನೆ ತಮ್ಮ ಗೌರವಕ್ಕೆ ಶೋಭೆ ತರುವಂಥದ್ದಲ್ಲ ಎಂದು ತೋರುತ್ತದೆ. ಅವರ ಈ ಪ್ರಸ್ತಾವನೆಯನ್ನು ಅವರಿಗೆ ನೋವಾಗದ ರೀತಿಯಲ್ಲಿ ಹೇಗೆ ನಿರಾಕರಿಸುವುದು ಎಂಬ ಗೋಜಿಗೆ ಬೀಳುತ್ತಾರೆ. ಕೊನೆಗೆ ಕಲ್ಪನೆಗೂ ಮೀರಿದ ಸಂಭಾವನೆಯನ್ನು ಕೇಳಿದರೆ ಆನಂದ್ ಸಹೋದರರು ಹಿಂದೆ ಸರಿಯಬಹುದು ಎಂಬ ಲೆಕ್ಕಾಚಾರದಲ್ಲಿ ಅರವತ್ತರ ದಶಕದಲ್ಲಿ ಕಂಡು ಕೇಳಿರದ ಸಂಭಾವನೆಯನ್ನು ಕೇಳುತ್ತಾರೆ! ಅಂದಿನ ದಿನಗಳಲ್ಲಿ ಚಿತ್ರದಲ್ಲಿನ ಹಾಡುಗಳೇ ಚಿತ್ರವನ್ನು ಯಶಸ್ಸಿಗೆ ಒಯ್ಯುತ್ತಿದ್ದವು; ಒಂದೊಂದು ಚಿತ್ರದಲ್ಲಿ ಎಂಟರಿಂದ ಹತ್ತು ಹಾಡುಗಳಿರುತ್ತಿದ್ದವು. ಆನಂದ್ ಸಹೋದರರು ಒಮ್ಮೆ ಯೋಚಿಸಿ ತಮ್ಮ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಅಷ್ಟು ಹಣವನ್ನು ಚಿತ್ರದ ಗೀತೆಗಳಿಗೆ ವ್ಯಯಿಸುವುದು ಹೆಚ್ಚಾಗಲಾರದೆಂದು ಎಣಿಸಿ ಶೈಲೇಂದ್ರರು ಸೂಚಿಸಿದ ಸಂಭಾವನನೆಯನ್ನು ಒಪ್ಪಿಕೊಳ್ಳುತ್ತಾರೆ. ಅಂದು ಶೈಲೇಂದ್ರರು ಕೇಳಿದ ಸಂಭಾವನೆಯನ್ನು ಇಂದಿನ ಮೌಲ್ಯಕ್ಕೆ ಪರಿವರ್ತಿಸಿದರೆ ಇಂದಿನ ಯಾವ ಖ್ಯಾತ ಗೀತಕಾರರೂ ಅಷ್ಟೊಂದು ಸಂಭಾವನೆ ಕೇಳುವ ಮನಸ್ಸು ಮಾಡುವುದಿರಲಿ, ಕನಸ್ಸಿನಲ್ಲಿಯೂ ಎಣಿಸಲಾರರು; ಅಂದು ಪ್ರತಿ ಗೀತೆಗೆ ಅವರು ಕೇಳಿದ ಸಂಭಾವನೆ ಹತ್ತು ಸಾವಿರ ರೂಪಾಯಿಗಳು!. ಮುಂದೆ ಅದೇ ಶೈಲೇಂದ್ರರ ಸಂಭಾವನೆಯ ಮಾನದಂಡವಾಯಿತು; ಆದರೆ ತನ್ನ ಬದುಕಿಗೆ ತಿರುವು ಕೊಟ್ಟ ರಾಜ್ ಕಪೂರರ ಚಿತ್ರಗಳಿಗೆ ಮಾತ್ರ ಶೈಲೇಂದ್ರರು ಕೇವಲ ಐದು ನೂರು ರೂಪಾಯಿಗಳ ಮಾಸಿಕ ಸಂಬಳ ಪಡೆಯುತ್ತಿದ್ದರು. ಅಲ್ಲಿಂದ ಮುಂದೆ ಎಲ್ಲ ಖ್ಯಾತ ಬ್ಯಾನರ್ ಗಳ ಚಿತ್ರಗಳಲ್ಲಿ ಶೈಲೇಂದ್ರರ ಗೀತೆಗಳಿರುತ್ತಿದ್ದವು. ಅವರಿಗೆ ಚಿತ್ರರಂಗದಲ್ಲಿ ತಾರೆಯ ಪಟ್ಟ ದೊರೆತಿತ್ತು. ಅವರ ಊಹೆಗೆ ಮೀರಿ ಹಣ, ಖ್ಯಾತಿ ಅವರನ್ನು ಅರಸಿ ಬಂತು. ಮುಂಬೈನಲ್ಲಿ ಬಂಗಲೆಯನ್ನು ಖರೀದಿಸಿ ಅದಕ್ಕೆ’ರಿಮ್ ಜಿಮ್’ ಎಂದು ಹೆಸರಿಡುತ್ತಾರೆ; ಮನೆಯ ತುಂಬ ಆಳು ಕಾಳು, ಮಕ್ಕಳಿಗೆಲ್ಲ ಯುರೋಪಿಯನ್ ಶಿಕ್ಷಣ; ಅವರ ಮನೆಯ ವೈಭವ ಮುಂಬೈನ ಯಾವ ಸಿನಿಮಾ ತಾರೆಯ ಮನೆಗೂ ಕಡಿಮೆ ಇರಲಿಲ್ಲ. ಅವರ ಮಗಳು ಅಮಲಾ ಮಜುಮ್ದಾರ್ ಹೇಳುವಂತೆ ಐಶ್ವರ್ಯ ಮತ್ತು ಖ್ಯಾತಿ ಅವರನ್ನು ಎಂದೂ ಬದಲಾಯಿಸಲಿಲ್ಲ. ಒಮ್ಮೆ ಅಮಲಾ ತನ್ನ ಬಾಲ್ಯದಲ್ಲಿ ಶಾಲೆಯಿಂದ ಮನೆಗೆ ಬರುವಾಗ ತನ್ನ ಪುಸ್ತಕಗಳನ್ನು ಮನೆಯ ಸೇವಕ ಹೊತ್ತು ತರುವಂತೆ ಮಾಡಿದ್ದಕ್ಕೆ ಆಕ್ಷೇಪಿಸಿ ಮುಂದೆ ಹಾಗೆ ಮಾಡದಂತೆ ತಾಕೀತು ಮಾಡಿದ್ದರಂತೆ.   
ಒಮ್ಮೆ ರಾಜ್ ಕಪೂರ್ ಶೈಲೇಂದ್ರರನ್ನು ಒಂದು ಕಥೆಯನ್ನು ಕೇಳುವ ಸಲುವಾಗಿ ಕೆ.ಎ.ಅಬ್ಬಾಸ್ ರವರ ಬಳಿ ಕರೆದುಕೊಂಡು ಹೋಗುತ್ತಾರೆ. ಈತ ಯಾರೊ ಹೊಸಬ ಎಂದು ಅಬ್ಬಾಸ್ ಶೈಲೇಂದ್ರರನ್ನು ಕಡೆಗಣಿಸಿ ರಾಜ್ ಕಪೂರ್ ಗೆ ಎರಡೂವರೆ ಗಂಟೆಗಳ ವರೆಗೆ ಕಥೆ ಹೇಳುತ್ತಾ ಹೋಗುತ್ತಾರೆ; ಕೊನೆಯಲ್ಲಿ ರಾಜ್ ಕಪೂರ್ ಏನಾದ್ರೂ ಅರ್ಥ ಆಯ್ತಾ ಎಂದು ಶೈಲೇಂದ್ರರನ್ನು ಕೇಳುತ್ತಾರೆ; ಅದಕ್ಕೆ ಶೈಲೇಂದ್ರರು ಹೌದು, “ಅಲೆಮಾರಿಯಂತೆ ತಿರುಗುವ ಹುಚ್ಚನಾಗಿದ್ದ, ಆದ್ರೆ ಆಕಾಶದ ತಾರೆಯಾಗಿದ್ದ…” (ಗರ್ದಿಷ್ ಮೆ ಥಾ, ಪರ್ ಆಸ್ಮಾನ್ ಕಾ ತಾರಾ ತಾ, ಅವಾರಾ ಥಾ…) ಇದನ್ನು ಕೇಳಿ ಅಬ್ಬಾಸ್ ಅವಾಕ್ಕಾದರು!  ತನ್ನ ಎರಡೂವರೆ ಗಂಟೆಗಳ ಕಥೆಯನ್ನು ಒಂದು ಸಾಲಿನಲ್ಲಿ ಹೇಳಿದ ಈತ ಯಾರು ಎಂದು ಅವರಿಗೆ ಅಚ್ಚರಿಯಾಯಿತು. ಮುಂದೆ ಆ ಚಿತ್ರಕ್ಕೇ ಶೈಲೇಂದ್ರರು ಇದೇ ಸಾಲನ್ನು ಮುಂದುವರಿಸಿ “ ಯಾ ಗರ್ದಿಷ್ ಮೆ ಹ್ಞೂಂ, ಆಸ್ ಮಾನ್ ಕಾ ತಾರಾ ಹ್ಞೂಂ, ಆ್ಞವಾರಾ.. ಹ್ಞೂಂ..” ಎಂಬ ಪ್ರಸಿದ್ದವಾದ ಹಾಡನ್ನು ‘ಆ್ಞವಾರಾ’ ಚಿತ್ರಕ್ಕೆ ಬರೆದರು.   ಈ ಮೂವರು, ಮುಂದೆ ಶಂಕರ್-ಜೈಕಿಶನ್ ಜೊಡಿಯ ಜೊತೆ ಸೇರಿ ಹಿಂದಿ ಚಿತ್ರರಂಗದ ದಾಖಲೆಯ ಚಿತ್ರಗಳನ್ನು ನಿರ್ಮಿಸಿದರು. ಬರ್ಸಾತ್ ಮತ್ತು ಆ್ಞವಾರಾ ಚಿತ್ರಗಳನಂತರ ಶೈಲೇಂದ್ರ ಬಹು ಬೇಡಿಕೆಯ ಗೀತಕಾರರಾದರು; ಇತರೆ
 ಈ ನಡುವೆ ಒಂದು ಶ್ರೇಷ್ಠ ಚಿತ್ರ ನಿರ್ಮಿಸುವ ಯೋಚನೆ ಮಾಡುತ್ತಾರೆ; ಆಗ ಅವರ ಕಣ್ಣಿಗೆ ಫಾಣೀಶ್ವರ್ ನಾಥರ ‘ಮಾರೆ ಗಯೆ ಗುಲ್ಫಂ’ ಕೃತಿ ಬೀಳುತ್ತದೆ. ಅದೊಂದು ಊರಿಂದೂರಿಗೆ ಹೋಗಿ ನಾಟಕ, ನೃತ್ಯ ಮಾಡುವ ಹೆಣ್ಣುಮಕ್ಕಳು ಎದುರಿಸುವ ಶೋಷಣೆ, ಪಡುವ ಪಾಡು, ಅನುಭವಿಸುವ ಕಷ್ಟ-ಕೋಟಲೆಗಳ ಅನಾವರಣ ಮಾಡುವ ಕಥೆ. ಅದಕ್ಕೆ ‘ತೀಸ್ರೀ ಕಸಮ್’ ಎಂದು ಹೆಸರಿಟ್ಟು,  ಚಿತ್ರಕಥೆಯನ್ನು ಬಿಮಲ್ ರಾಯ್ ರ ದೇವದಾಸ್, ಸುಜಾತಾ ಮತ್ತು ಬಂದಿನಿ ಚಿತ್ರಗಳಿಗೆ ಚಿತ್ರ ಕಥೆಯನ್ನು ಬರೆದ ನಬೆಂದು ಘೋಷ್ ರ ಕೈಯ್ಯಲ್ಲಿ ಬರೆಸುತ್ತಾರೆ;  ಸಂಭಾಷಣೆಯನ್ನು ಮೂಲ ಲೇಖಕರಾದ ಫಾಣೀಶ್ವರ್ ನಾಥರಿಂದಲೇ ಬರೆಸುತ್ತಾರೆ; ನಿರ್ದೇಶನಕ್ಕೆ  ಬಿಮಲ್ ರಾಯ್ ರ ಸಹಾಯಕ ನಿರ್ದೇಶಕ ಬಸು ಭಟ್ಟಾಚಾರ್ಯರನ್ನು ಕರೆತರುತ್ತಾರೆ. ಮುಖ್ಯಪಾತ್ರದಲ್ಲಿ ತನ್ನ ಮಿತ್ರ ರಾಜ್ ಕಪೂರ್ ಮತ್ತು ಆತನಿಗೆ ನಾಯಕಿಯಾಗಿ ವಹೀದಾ ರಹಮಾನ್ ನಟಿಸುತ್ತಾರೆ. ಶೈಲೇಂದ್ರ ಈ ಚಿತ್ರ  ನಿರ್ಮಾಣಕ್ಕೆ ತನ್ನ ತನು, ಮನ, ಧನವನ್ನೆಲ್ಲ ಅರ್ಪಿಸುತ್ತಾರೆ. ‘ತೀಸ್ರೀ ಕಸಮ್ ನ ಚಿತ್ರ ನಿರ್ಮಾಣ ಸರಾಗವಾಗಿ ಸಾಗುವುದಿಲ್ಲ; ಸಹಜವಾಗಿ ಬರಬೇಕೆಂಬ ಉದ್ದೇಶದಿಂದ ಚಿತ್ರೀಕರಣದ ಲೊಕೇಶನ್ ಮುಂಬೈನ ಸ್ಟುಡಿಯೊಗಳಿಂದ ಮಧ್ಯಪ್ರದೇಶದ ಬಿನಾ ಎಂಬ ಊರಿಗೆ ಸ್ಥಳಾಂತರಗೊಳ್ಳುತ್ತದೆ;

ದೂರ ದೂರಿನ ಚಿತ್ರೀಕರಣವಾದ್ದರಿಂದ ಎಲ್ಲ ಅಸ್ತ-ವ್ಯಸ್ತವಾಗುತ್ತದೆ; ಏರಿದ ಬಜೆಟ್, ಸಮಯಕ್ಕೆ ಸರಿಯಾಗಿ ಸಿಗದ ರಾಜ್ ಕಪೂರರ ಡೇಟ್ಸ್; ಇವೆಲ್ಲದರ ನಡುವೆ ಆಗಾಗ್ಗೆ ಮುಂದೂಡಲ್ಪಡುವ ಚಿತ್ರೀಕರಣ
ಐದು ಧೀರ್ಘ ವರ್ಷಗಳ ಕಾಲ ಹಿಡಿಯುತ್ತದೆ. ಈ ನಡುವೆ ನಿಜವಾದ ಮಿತ್ರರಾರು ಎಂಬುದು ಶೈಲೇಂದ್ರರಿಗೆ ತಿಳಿಯುತ್ತದೆ. ರಾಜ್ ಕಪೂರ್ ಮತ್ತು ಮುಕೇಶ್ ಹೊರತಾಗಿ ಎಲ್ಲ ಸ್ನೇಹಿತರು ಅವರನ್ನು ಕೈಬಿಡುತ್ತಾರೆ; ಶೈಲೇಂದ್ರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಅಂತೂ ತೀಸ್ರೀ ಕಸಮ್ ಚಿತ್ರ ಬಿಡುಗಡೆಯಾಗಿ ಯಶಸ್ಸು ಕಾಣದೆ ನೆಲ ಕಚ್ಚುತ್ತದೆ. ಚಿತ್ರದ ಸೋಲನ್ನು ಜೀರ್ಣಿಸಿಕೊಳ್ಳಲಾಗದೆ ಶೈಲೇಂದ್ರರ ಆರೋಗ್ಯ ಕೆಡುತ್ತದೆ; 1966 ರ ಡಿಸೆಂಬರ್ 13 ರಂದು ತೀವ್ರ ಅಸ್ವಸ್ಥರಾದ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಹೇಳುತ್ತಾರೆ; ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ತನ್ನ ಮಿತ್ರನಾದ ರಾಜ್ ಕಪೂರನ ಕುಟೀರ ಬರುತ್ತದೆ; ಮಿತ್ರನನ್ನು ಮಾತಾಡಿಸಿ ಹೋಗಬೇಕೆನಿಸುತ್ತದೆ; ಒಳಗೆ ಹೋಗಿ ಮಿತ್ರನೊಡನೆ ಮಾತನಾಡಿ ಅಪೂರ್ಣವಾಗಿದ್ದ ಮೆರಾ ನಾಮ್ ಜೋಕರ್ ಸಿನಿಮಾದ “ ಜೀನಾ ಯಹಾ, ಮರ್ನಾ ಯಹಾ…” ಹಾಡನ್ನು ಆಸ್ಪತ್ರೆಯಿಂದ ಹಿಂತಿರುಗಿ ಬಂದ ಮೇಲೆ ಪೂರ್ಣಗೊಳಿಸುವುದಾಗಿ ಹೇಳಿ ಹೊರಟ 43 ವರ್ಷದ ಶೈಲೇಂದ್ರ ಮತ್ತೆ ಮರಳಲೇ ಇಲ್ಲ;

 ಮರುದಿನ ಡಿಸೆಂಬರ್ 14, ತನ್ನ ಆಪ್ತಮಿತ್ರ ರಾಜ್ ಕಪೂರನ ಜನ್ಮದಿನದಂದು ಭಾರತೀಯ ಚಿತ್ರರಂಗ ಕಂಡ ಅಭೂತಪೂರ್ವ ಕವಿ, ಗೀತಕಾರ ಚೇತನ ಈ ಲೋಕ ಬಿಟ್ಟು ತೆರಳಿತು; ತೀಸ್ರೀ ಕಸಮ್ ಚಿತ್ರ ಶೈಲೇಂದ್ರರ ಜೀವವನ್ನೇ ತಿಂದಿತು.

ಮುಂದೆ ‘ತೀಸ್ರೀ ಕಸಮ್’ ಚಿತ್ರ ಕ್ರಮೇಣ ಜನ ಮನ್ನಣೆಯನ್ನು ಗಳಿಸಿ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಗಳಿಸುತ್ತದೆ. ಇಂದಿಗೂ ‘ತೀಸ್ರೀ ಕಸಮ್’ ಸರ್ವೋತ್ತಮ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ.

 ಶೈಲೇಂದ್ರರು ಬರೆದ ಹಾಡುಗಳು ಇಂದಿಗೂ ಜನರ ಮನದಲ್ಲಿವೆ. 'ಆವಾರಾ' ಸಿನಿಮಾದ "ಆವಾರಾ ಹ್ಞೂಂ...", ಬರ್ಸಾತ್ ಸಿನಿಮಾದ " ಬರ್ಸಾತ್ ಮೆ ಹಮ್ ಸೆ ಮಿಲೆ..., ಶ್ರೀ 420 ಸಿನಿಮಾದ " ಪ್ಯಾರ್ ಹುವಾ ಇಕರಾರ್ ಹುವಾ..", " ರಾಮಯ್ಯ ವಸ್ತಾವಯ್ಯ ", "ಮುಡ್ ಮುಡ್ ಕೆ ದೇಖ್ ಮುಡ್ ಮುಡ್ ಕೆ..", ಮೇರಾ ಜೂತಾ ಹೆ ಜಪಾನಿ..; ಗೈಡ್ ಸಿನಿಮಾದ "ಆಜ್ ಫಿರ್ ಜೀನೇ ಕಿ ತಮನ್ನಾಹೆ.." , " ಗಾತಾ ರಹೇ ಮೆರಾ ದಿಲ್ ..." , " ಪಿಯಾ ತು ಸೆ ನೈನಾ ಲಾಗೆ ರೇ..." , ಸಂಗಮ್ ಸಿನಿಮಾದ " ದೋಸ್ತ್  ದೋಸ್ತ್ ರಹಾ.";  

ದಿಲ್ ಅಪನಾ ಔರ್ ಪ್ರೀತ್ ಪರಾಯೆ ಸಿನಿಮಾದ " ಅಜೀಬ್ ದಾಸ್ತಾನ್ ಹೈ ಕಹಾ ಶುರು ಕಹಾ ಖತಮ್... " , ತೀಸ್ರಿ ಕಸಂ ಸಿನಿಮಾದ "ಸಜನೆ ರೇ ಜೂಟ್ ಮತ್ ಬೋಲೊ..." , " ಪಾನ್ ಖಾಯೆ ಸಯ್ಯಾ ಹಮಾರೊ..."  

ಆದರೆ ಈ ಗೀತೆಗಳನ್ನೆಲ್ಲ ಶೈಲೇಂದ್ರರು ಬರೆದದ್ದು ಎಂಬುದು ಮಾತ್ರ ಮಾಸಿ ಹೋಗಿದೆ. 

ಸಜನೆ ರೇ ಜೂಟ್ ಮತ್ ಬೋಲೊ,
ಖುದಾ ಕೆ ಪಾಸ್ ಜಾನಾ ಹೆ
ನ ಹಾಥಿ ಹೆ, ನ ಗೋಡಾ ಗೆ, 
ವಹಾ ಪೈಗಲ್ ಹೀ ಜಾನಾ ಹೇ...

ಛೋಟಿ ಸಿ ಹೆ ದುನಿಯಾ,
ಪೆಹೆಚಾನೆ ರಾಸ್ತೆ ಹೆ, ಕಭೀತೊ ಮಿಲೋಗೆ,
ಕಹೀತೊ ಮಿಲೋಗೆ,
ತೊ ಪೂಚೆಂಗೆ ಹಾಲ್….

ಎಂದು ಹಾಡಿದ ಕೋಗಿಲೆ ಅಮರವಾಗಲಿ.

No comments:

Post a Comment